ಕೆಲವೊಮ್ಮೆ ಬದುಕು ನಾವು ನಿರೀಕ್ಷಿಸಿ ಇರದ ದಿಕ್ಕಿಗೆ ತಿರುಗಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಯಾವುದೋ ನೀತಿಕತೆಗಳು ನಿಮ್ಮ ಬದುಕಿಗೆ ಹೊಸ ದಿಕ್ಕು ತೋರಿಸಬಲ್ಲದು. ಅಂತಹ ನೀತಿಕತೆಯೊಂದು ಇಲ್ಲಿದೆ.
ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ
24 ವಯಸ್ಸಿನ ತರುಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಿಟಕಿಯಾಚೆ ನೋಡಿ ಆ ಯುವಕ `ಅಪ್ಪ, ನೋಡಲ್ಲಿ, ಮರಗಳು ಹಿಂದೆ ಓಡುತ್ತಿವೆ’ ಎಂದ. ತಂದೆ ನಕ್ಕರು. ಆ ತರುಣನ ಎದುರು ಕುಳಿತ ನವದಂಪತಿಗಳಿಗೆ ಇದು ಅಸಹನೀಯ ಅನಿಸಿತು. ಇಷ್ಟು ದೊಡ್ಡ ಯುವಕ ಪುಟ್ಟ ಮಕ್ಕಳಂತೆ ಇದ್ದಾನಲ್ಲ ಎಂದೆನಿಸಿತು.
ಸ್ವಲ್ಪ ಹೊತ್ತಿನಲ್ಲಿ ಆ ತರುಣ `ಅಪ್ಪ, ಮೋಡಗಳೂ ನಮ್ಮೊಂದಿಗೆ ಸಾಗುತ್ತಿವೆ’ ಎಂದ. ಈಗ ನವದಂಪತಿಗಳಿಗೆ ತಡೆಯಲಾಗಲಿಲ್ಲ. ಆ ಯುವಕನ ತಂದೆಗೆ `ಇವನನ್ನು ಒಳ್ಳೆಯ ವೈದ್ಯರಿಗೆ ಯಾಕೆ ತೋರಿಸಬಾರದು?’ ಎಂದರು.
ಅದಕ್ಕೆ ಹಿರಿಯ ವ್ಯಕ್ತಿ ನಕ್ಕು ಉತ್ತರಿಸಿದರು. `ನಾನು ವೈದ್ಯರಿಗೆ ತೋರಿಸಿದ್ದೆ. ನಾವೀಗ ಆಸ್ಪತ್ರೆಯಿಂದ ಬರುತ್ತಿದ್ದೇವೆ. ನನ್ನ ಮಗ ಹುಟ್ಟಿನಿಂದಲೇ ಅಂಧ. ಅವನಿಗೆ ಇವತ್ತು ಕಣ್ಣು ಬಂತು’ ಎಂದಾಗ ಪ್ರಶ್ನೆ ಕೇಳಿದವರು ತಲೆತಗ್ಗಿಸಿದರು.
ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮದೇ ಕತೆ ಹೊಂದಿರುತ್ತಾರೆ. ಅವರದ್ದೇ ಆದ ಸಾಮಥ್ಯಱ ಅಥವಾ ದೌರ್ಬಲ್ಯ ಹೊಂದಿರುತ್ತಾರೆ. ಹೀಗಾಗಿ, ಯಾವುದೇ ವ್ಯಕ್ತಿಯ ಕುರಿತು ಮೊದಲ ನೋಟಕ್ಕೆ ಏನನ್ನೂ ತೀರ್ಮಾನಿಸಬೇಡಿ.
(ಎಲ್ಲೋ ಓದಿದ ನೀತಿಕತೆಯ ಸಂಗ್ರಹ)