ಒಬ್ಬ ರಾಜನಿದ್ದ. ಒಂದು ದಿನ ಆತ ಮಾರುವೇಷದಲ್ಲಿ ನಗರ ಸಂಚಾರಕ್ಕೆ ಹೊರಟ. ಒಂದು ರಸ್ತೆಯಲ್ಲಿ ದೊಡ್ಡ ಕಲ್ಲೊಂದನ್ನು ಇಟ್ಟು ಅಡಗಿ ಕುಳಿತ. ದಾರಿಗೆ ಅಡ್ಡವಾದ ಆ ಕಲ್ಲನ್ನು ಯಾರಾದರೂ ಬದಿಗೆ ಸರಿಸುತ್ತಾರೋ ಎಂದು ಕಾದುಕುಳಿತ.
ಆ ರಾಜನ ರಾಜ್ಯದ ಶ್ರೀಮಂತರು ಮತ್ತು ವರ್ತಕರು ರಸ್ತೆಯಲ್ಲಿ ಬಂದರು. ಆ ಕಲ್ಲನ್ನು ನೋಡಿದರೂ ನೋಡದಂತೆ ಮುಂದೆ ಸಾಗಿದರು.
ಮತ್ತೆ ಹಲವು ಮಂದಿ ಬಂದರೂ ಯಾರೂ ಕಲ್ಲನ್ನು ಪಕ್ಕಕ್ಕೆ ಸರಿಸುವ ಯೋಚನೆ ಮಾಡಲಿಲ್ಲ.
ಕೊನೆಗೆ ಒಬ್ಬಾತ ಬಂದ.
ಆತನ ಕೈ ತುಂಬಾ ತರಕಾರಿ ಇತ್ತು. ನೋಡಲು ಬಡವನಂತೆ ಕಾಣಿಸುತ್ತಿದ್ದ.
ಆತನಿಗೆ ರಸ್ತೆಯ ನಡುವೆ ಇರುವ ಕಲ್ಲು ಕಾಣಿಸಿತು. ದಾರಿಯಲ್ಲಿ ಹೋಗುವವರಿಗೆ ಇದರಿಂದ ಏನಾದರೂ ತೊಂದರೆಯಾಗಬಹುದು ಎಂಬ ಭಾವನೆ ಆತನಲ್ಲಿ ಮೂಡಿತ್ತು.
ತನ್ನಲ್ಲಿದ್ದ ತರಕಾರಿಗಳನ್ನೆಲ್ಲ ರಸ್ತೆ ಬದಿಯಲ್ಲಿ ಇಟ್ಟ. ಕಷ್ಟಪಟ್ಟು ಕಲ್ಲನ್ನು ಸರಿಸಲು ಯತ್ನಿಸಿದ. ಅದು ತುಂಬಾ ಭಾರವಾಗಿತ್ತು.
ಹೇಗೋ ಕಷ್ಟಪಟ್ಟು ಕಲ್ಲನ್ನು ತಳ್ಳುತ್ತಾ ಸರಿಸಲು ಯತ್ನಿಸಿದ.
ತುಂಬಾ ಸಮಯ ಕಳೆಯಿತು. ಕಲ್ಲನ್ನು ಬದಿಗೆ ಸರಿಸಲು ಕೊನೆಗೂ ಯಶಸ್ವಿಯಾದ.
ನಂತರ ತನ್ನ ತರಕಾರಿಗಳನ್ನು ಹೆಕ್ಕಿಕೊಂಡ.
ಇನ್ನೇನೂ ಹೋಗಬೇಕೆಂದು ತಯಾರಾಗುತ್ತಿದ್ದಾಗ ಮರೆಯಲ್ಲಿದ್ದ ಮಾರುವೇಷದಲ್ಲಿದ್ದ ರಾಜ ಹೊರಬಂದ. ಚಿನ್ನದ ಥೈಲಿಯೊಂದನ್ನು ತೆಗೆದು ಆತನಿಗೆ ನೀಡಿದ. ಜೊತೆಗೆ ಒಂದು ಪತ್ರವೂ ಇತ್ತು. `ರಸ್ತೆಯಲ್ಲಿ ಇದ್ದ ಕಲ್ಲನ್ನು ಬದಿಗೆ ಸರಿಸಿದ್ದಕ್ಕೆ ಬಹುಮಾನ- ಪ್ರೀತಿಯಿಂದ ಮಹಾರಾಜ” ಎಂದು ಬರೆದಿತ್ತು.
* ಬದುಕಿನಲ್ಲಿ ಇತರರಿಗೆ ಒಳ್ಳೆಯದನ್ನು ಬಯಸುವ ಮನಸ್ಸು ನಮ್ಮಲ್ಲಿ ಇರಬೇಕು. ಇಂತಹ ಒಳ್ಳೆಯ ಕೆಲಸಗಳಿಂದ ಅತ್ಯುತ್ತಮ ಪ್ರತಿಫಲ ದೊರಕುತ್ತದೆ.
* ನಮಗೆ ಸಂಬಂಧಿಸಿದ್ದಲ್ಲ ಎಂಬ ಮನೋಭಾವ ಬಿಡಬೇಕು. ಆ ವ್ಯಕ್ತಿಯು ರಸ್ತೆಯಲ್ಲಿದ್ದ ಕಲ್ಲನ್ನು ಹಾಗೆಯೇ ಬಿಟ್ಟು ಹೋಗಿದ್ದರೆ ಚಿನ್ನದ ಥೈಲಿಯನ್ನು ಪಡೆಯುತ್ತಿರಲಿಲ್ಲ.
* ನಮ್ಮ ಬದುಕಿನಲ್ಲಿ ಸಾಕಷ್ಟು ಅವಕಾಶಗಳು ನಾನಾ ರೂಪದಲ್ಲಿ ಬರುತ್ತವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.
(ಮೂಲ: ಇಂಗ್ಲಿಷ್ . ಭಾವಾನುವಾದ- ಕರ್ನಾಟಕ ಬೆಸ್ಟ್)
Pingback: ಓದಲೇಬೇಕಾದ ನೀತಿಕತೆ: ವಜ್ರ ಮತ್ತು ರೈತ | Karnataka Best Moral Story
Pingback: Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು | ಕರ್ನಾಟಕ Best