ಹೆಡ್ಲೈನ್ ನೋಡಿದಾಗ ನಿಮಗೆ ಆಶ್ಚರ್ಯವಾಗಿರಬಹುದು. ಟಾರ್ಚ್ ಯಾಕೆ? ದೊಡ್ಡ ಜನರೇಟರ್ ಅನ್ನೇ ಆನ್ ಮಾಡ್ತಿವಿ, ಎಂದು ಹೇಳಬಹುದು. ನಾನು ಹೇಳಲು ಹೊರಟ ಟಾರ್ಚ್ ಒಂದಿಷ್ಟು ವಿಚಾರ ಮಾಡುವಂತದ್ದು. ನೀತಿಕತೆ.
ಯಂಡಮೂರಿ ವೀರೇಂದ್ರನಾಥ್ ಬರೆದ ಕಣಿವೆಯಿಂದ ಶಿಖರಕ್ಕೆ (ಕನ್ನಡ ಅನುವಾದ- ಯತಿರಾಜ್ ವೀರಾಂಬುಧಿ) ಪುಸ್ತಕ ಓದಿದಾಗ ಒಂದು ಕತೆ ಗಮನ ಸೆಳೆಯಿತು. ಅದನ್ನು ಕರ್ನಾಟಕಬೆಸ್ಟ್.ಕಾಂ ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು.
[rml_read_more]
“ತನ್ನ ಸ್ನೇಹಿತನನ್ನು ಒಬ್ಬ ಡಿನ್ನರ್ಗೆ ಆಹ್ವಾನಿಸಿದ. ಆತ ಮನೆಗೆ ಮರಳಿ ಹೊರಟಾಗ ಅವನಿಗೆ ಟಾರ್ಚ್ಲೈಟ್ ಒಂದನ್ನು ನೀಡಿದನಂತೆ. “ಇದೇಕೆ, ನನಗೆ ರಾತ್ರಿ ವೇಳೆ ಕಣ್ಣು ಕಾಣಿಸುವುದಿಲ್ಲ ಎಂದು ತಾನೇ?’’ ಎಂದು ಸ್ನೇಹಿತ ನೊಂದುಕೊಂಡನಂತೆ. ನಿನಗಾಗಿ ಅಲ್ಲ ಗೆಳೆಯಾ, ಎದುರಿನಿಂದ ಬರುವ ವ್ಯಕ್ತಿ ನಿನ್ನನ್ನು ಗುರುತಿಸಲಿ ಎಂದು” ಅಂತ ಹೇಳಿದಾಗ ಅತಿಥಿ ಮರುಮಾತನಾಡದೆ ಟಾರ್ಚ್ ಹಿಡಿದುಕೊಂಡು ಹೊರಗೆ ಹೋದ.
ಹೀಗೆ, ಇವನು ದಾರಿಯಲ್ಲಿ ಹೋಗುತ್ತಿರುವಾಗ ಒಬ್ಬ ಸೈಕಲ್ನವನು ಇವನಿಗೆ ಡಿಕ್ಕಿ ಹೊಡೆದ. “ಕೈಯಲ್ಲಿರುವ ಟಾರ್ಚ್ ಕಾಣಿಸುತ್ತಿಲ್ಲವೇ ನಿನಗೆ, ನಾನು ರಾತ್ರಿ ಕುರುಡ’’ ಎಂದಾಗ ಸೈಕಲಿಸ್ಟ್ ಗಲಿಬಿಲಿಗೊಂಡು “ಅಯ್ಯೋ, ನನ್ನನ್ನು ಕ್ಷಮಿಸಿಬಿಡಿ, ಆದರೆ…. ನೀವು ಟಾರ್ಚ್ ಆನ್ ಮಾಡಿಯೇ ಇಲ್ಲ” ಎಂದನಂತೆ.
ಇವಿಷ್ಟು ಕಣಿವೆಯಿಂದ ಶಿಖರಕ್ಕೆ ಕೃತಿಯಲ್ಲಿ ಬರುವ ಒಂದು ಪುಟ್ಟ ಕತೆ. ಆದರೆ, ಈ ಪುಟ್ಟ ಕತೆ ನಮ್ಮನ್ನು ಯೋಚನೆಗೆ ಹಚ್ಚುತ್ತದೆ.
ಆ ಪುಸ್ತಕದಲ್ಲಿ ಆ ಕತೆಗೆ ನೀಡಿದ ವಿವರಣೆಯನ್ನು ನಾನಿಲ್ಲಿ ನೆನಪಿಸುವುದಿಲ್ಲ. ಯಾಕೆಂದರೆ, ಈ ಕತೆ ಅವರವರ ಭಾವಕ್ಕೆ, ಯೋಚನೆಗೆ ತಕ್ಕಂತೆ ಇರುತ್ತದೆ.
ನಮ್ಮಲ್ಲಿಯೂ ಒಂದು ಟಾರ್ಚ್ ಇರುತ್ತದೆ. ಅದನ್ನು ಬುದ್ಧಿ ಎಂದುಕೊಳ್ಳಬಹುದು ಅಥವಾ ಬೇರೆ ಏನಾದರೂ ಅಂದುಕೊಳ್ಳಬಹುದು. ಮಿದುಳು ಎಂದುಕೊಳ್ಳಬಹುದು. ಎಲ್ಲರಲ್ಲಿಯೂ ಮಿದುಳು ಇರುತ್ತದೆ. ಆದರೆ, ಅದನ್ನು ಅವಶ್ಯಕತೆ ಇರುವಲ್ಲಿ ಆನ್ ಮಾಡುವುದಿಲ್ಲ.
ಈಗ ನೀವು ಯೋಚನೆ ಮಾಡಿ
- ನಿಮ್ಮ ಸಂಪೂರ್ಣ ಸಾಮರ್ಥ್ಯವೆಂಬ ಟಾರ್ಚ್ ಅನ್ನು ಮಾಡಿದ್ದೀರಾ?
- ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿದ್ದೀರಾ? ಟಾರ್ಚ್ ಆನ್ ಮಾಡಿದ್ದರೆ ಇವನ್ನು ಗುರುತಿಸಬಹುದು.
ನಾನು ಈ ರೀತಿ ಹೆಚ್ಚು ವಿವರಣೆ ನೀಡಲು ಹೋಗುವುದಿಲ್ಲ. ವಿವರಣೆ ಬೇಕಿದ್ದರೆ ಯಂಡಮೂರಿ ಅವರ ಪುಸ್ತಕವನ್ನು ಓದಬಹುದು. ಸದ್ಯ ನೀವು ಈ ಮೇಲಿನ ಕತೆಯನ್ನು ಇನ್ನೊಮ್ಮೆ ಓದಿ, ನಿಮ್ಮ ಮೇಲೆ ಅದನ್ನು ಅನ್ವಯಿಸಿಕೊಂಡು ಧೇನಿಸಿ. ನೀವು ಆಫ್ ಮಾಡಿಟ್ಟಿರುವ ಲೈಟ್ಗಳನ್ನೆಲ್ಲ ಉರಿಸಿ. ನಿಮ್ಮ ಬದುಕಿನ ಪ್ರಭೆ ಹೆಚ್ಚಲಿ.
Karnatakabestನಲ್ಲಿರುವ ವ್ಯಕ್ತಿತ್ವ ವಿಕಸನ ಮತ್ತು ನೀತಿಕತೆಗಳನ್ನು ಓದಿರಿ.