ಬೆಂಗಳೂರು : ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ವಿಳಂಬವಾಗುವುದರಿಂದ ಶಿಕ್ಷಕರ ಕೊರತೆ ನೀಗಿಸಲು 4 ಸಾವಿರ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಸರಕಾರ ನಿರ್ಧರಿಸಿದೆ. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ ಅತಿಥಿ ಶಿಕ್ಷಕರ 2 ನೇ ಹಂತದ ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.
ರಾಜ್ಯದಲ್ಲಿ ಒಟ್ಟು 30 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿಯಿದ್ದು, ಮೊದಲ ಹಂತದಲ್ಲಿ 18 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಇನ್ನೂ 12 ಸಾವಿರಕ್ಕೂ ಅಧಿಕ ಹುದ್ದೆ ಭರ್ತಿ ಅಗತ್ಯವಿದೆ. ಪ್ರಸ್ತುತ 4 ಸಾವಿರ ಹೆಚ್ಚುವರಿ ಶಿಕ್ಷಕರನ್ನು ಎರಡನೇ ಹಂತದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಉಪನಿರ್ದೇಶಕರು ಹುದ್ದೆ ಖಾಲಿಯಿರುವ ತಾಲೂಕುಗಳ ಅಗತ್ಯ ಮನಗಂಡು ಮರುಹಂಚಿಕೆ ಮಾಡಿ ಆದೇಶಿಸಬೇಕೆಂದು ಶಿಕ್ಷಣ ಅಯುಕ್ತ ಡಾ.ವಿಶಾಲ್ ಆರ್ ತಿಳಿಸಿದ್ದಾರೆ.