ಬೆಂಗಳೂರು : ಸರಕಾರಿ ಪ್ರಾಥಮಿಕ/ಪ್ರೌಢ ಶಾಲಾ ಶಿಕ್ಷಕರನ್ನು ಅನ್ಯ ಇಲಾಖೆಗೆ ನಿಯೋಜಿಸಿರುವುದನ್ನು ರದ್ದುಪಡಿಸಿ ತಮ್ಮ ಮಾತೃ ಇಲಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದು, ಸರಕಾರಿ ಪ್ರಾಥಮಿಕ/ ಪ್ರೌಢ ಶಾಲಾ ಶಿಕ್ಷಕರನ್ನು ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನಿಯೋಜನೆ ಮೇರೆಗೆ ಸರಕಾರ ಅನುಮತಿ ನೀಡಿರುತ್ತದೆ.
ಸದರಿ ಶಿಕ್ಷಕರುಗಳ ನಿಯೋಜನೆ ಮಾರ್ಚ್ 2021 ಕ್ಕೆ ಅಂತ್ಯವಾಗಿದ್ದು, ಕೆಲವು ಶಿಕ್ಷಕರು ಬೋಧಕೇತರ ಹುದ್ದೆಗಳಿಗೆ ನಿಯೋಜನೆಗೊಳಿಸಿರುವುದರಿಂದ ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಹಿನ್ನೆಡೆ ಉಂಟಾಗುತ್ತದೆ. ಆದ್ದರಿಂದ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನಿಯೋಜಿಸಿರುವ ಶಿಕ್ಷಕರ ನಿಯೋಜನೆಯನ್ನು ರದ್ದುಪಡಿಸಬೇಕಾಗಿ ಸೂಚನೆ ಹೊರಡಿಸಲಾಗಿತ್ತು. ಆದರೆ ಸದರಿ ಶಿಕ್ಷಕರ ನಿಯೋಜನೆಯನ್ನು ಇಲ್ಲಿಯವರೆಗೆ ರದ್ದುಪಡಿಸಿ ಮಾತೃ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ತಿಳಿದು ಬಂದಿದೆ. ಈ ಹಿನ್ನೆಲೆ ಕೂಡಲೇ ಈ ನಮೂನೆಯಲ್ಲಿ ತಕ್ಷಣ ಮಾಹಿತಿ ಸಲ್ಲಿಸುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರುಗಳಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.