ಮೂರು ನಾಲ್ಕು ದಿನಗಳಲ್ಲಿ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ ಯು ಇದೆ. ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು ಕರಡು ರೂಪಿಸಿ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದಿದ್ದು, ಪರಿಶೀಲನೆ ಯಲ್ಲಿ ಇಲಾಖೆಯು ತೊಡಗಿದೆ. ಈ ಪ್ರಕ್ರಿಯೆಯು ಎರಡು ದಿನಗಳ ಲ್ಲಿ ಮುಗಿಯಲಿದ್ದು, ಆನಂತರ ವೇಳಾಪಟ್ಟಿ ಹಾಗೂ ಮಾರ್ಗಸೂಚಿ ಗಳನ್ನು ಇಲಾಖೆ ಬಿಡುಗಡೆ ಮಾಡಲಿದೆ.
ಕಳೆದ ವರ್ಷದ ವರ್ಗಾವಣೆಯಲ್ಲಿ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ಸಿಲುಕಿದ ಶಿಕ್ಷಕರಿಗೆ ಈ ಬಾರಿ ಮೊದಲ ಆದ್ಯತೆಯು ಸಿಗಲಿದೆ. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಅಧಿನಿಯಮ 2021 ರಲ್ಲಿ ಈ ಹಿಂದೆ ಕಡ್ಡಾಯ ವರ್ಗಾವಣೆ , ವಲಯ ವರ್ಗಾವಣೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ ಸ್ಥಳ ಆಯ್ಕೆ ಮಾಡಿಕೊಂಡ ಶಿಕ್ಷಕರಿಗೆ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕೆಲಸ ನಿರ್ವಹಿಸುತ್ತಿದ್ದರೋ ಅಲ್ಲೇ ಮರುನಿಯೋಜನೆ ಮಾಡಲಾಗುತ್ತದೆ.
ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲೆ ಒಳಗೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಾಲೂಕು ಒಳಗೆ ನಿಯುಕ್ತಿ ನೀಡುವುದು ಕಾಯ್ದೆಯ ಮುಖ್ಯ ಉದ್ದೇಶವಾಗಿರುತ್ತದೆ.
70 ಸಾವಿರ ಶಿಕ್ಷಕರು ಈಗಾಗಲೇ ವರ್ಗಾವಣೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಹಲವಾರು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ.ವರ್ಗಾವಣೆ ಗೆ ಅರ್ಜಿ ಸಲ್ಲಿಸಲು ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು. ಪ್ರಕ್ರಿಯೆ ವಿಳಂಬವಾಗಿರುವುದರಿಂದ ಮೂರು ವರ್ಷ ಪೂರೈಸಿರುವ ಹೆಚ್ಚಿನ ಶಿಕ್ಷಕರು ಅರ್ಜಿ ಸಲ್ಲಿಸಲು ಅರ್ಹತೆ ಪಡೆದುಕೊಂಡಿರುತ್ತಾರೆ. ಹೊಸದಾಗಿ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆ ಅವಕಾಶ ನೀಡಲಿದೆ. ಆದರೆ ಹಾಲಿ ಅರ್ಜಿ ಸಲ್ಲಿಸುವವರು ಸಹ ಮರು ಅರ್ಜಿ ಸಲ್ಲಿಸಬೇಕೇ ಎಂಬ ಪ್ರಶ್ನೆಗೆ ಉತ್ತರ ಮಾರ್ಗಸೂಚಿ ಬಿಡುಗಡೆಯ ನಂತರ ತಿಳಿಯಲಿದೆ.