ಅವನು ತುಂಬಾ ಹೃದಯವಂತ. ಯಾರೇ ಕಷ್ಟದಲ್ಲಿದ್ದರೂ ಸಹಾಯ ಮಾಡುವ ಪರೋಪಕಾರಿ. ಒಂದಿನ ಹೂದೋಟಕ್ಕೆ ಹೋದಾಗ ಅಲ್ಲೊಂದು ಚಿಟ್ಟೆಯ ಗೂಡು ಕಂಡ. ರೇಷ್ಮೆ ಹುಳುಗಳ ಗೂಡು ರೀತಿ ಹುಳು ಚಿಟ್ಟೆಯಾಗುವ ಮುನ್ನ ಇಂತಹದೊಂದು ಗೂಡಿನಿಂದ ಹೊರಬರಬೇಕು.
ಒಂದಿನ ಈ ಯುವಕ ಆ ಚಿಟ್ಟೆಯ ಗೂಡು ಕಂಡ. ಅದು ಕೊಂಚ ತೆರೆದಿರುವುದನ್ನು ನೋಡಿದ. ತುಂಬಾ ಗಂಟೆ ಅಲ್ಲೇ ಕುಳಿತ.
ಆ ಚಿಟ್ಟೆ ಹುಳು ಪಾಪ ಆ ಗೂಡಿನಿಂದ ತನ್ನ ದೇಹವನ್ನು ಹೊರಗೆ ಹಾಕಲು ತುಂಬಾ ಕಷ್ಟಪಡುತ್ತಿತ್ತು.
ಆ ಯುವಕ ಹೀಗೆ ನೋಡುತ್ತಲೇ ಇದ್ದ.
ಪಾಪ ಅವನಿಗೂ ಬೇಜಾರಾಯಿತು.
ಈ ಚಿಟ್ಟೆ ಹುಳ ಆ ಗೂಡಿನಿಂದ ಹೊರಬರಲು ಪ್ರಯತ್ನ ಪಡುತ್ತಲೇ ಇತ್ತು.
ಸಡನ್ ಆಗಿ ಹೊರಗೆಬರುವ ಪ್ರಕ್ರಿಯೆ ನಿಲ್ಲಿಸಿತು. ಎಲ್ಲೋ ಗೂಡಿನ ಕವಚದಲ್ಲಿ ಹುಳ ಸಿಲುಕಿಕೊಂಡಿದೆ ಎಂದು ಅವನು ಭಾವಿಸಿದ.
ಚಿಟ್ಟೆ ಹುಳ ನಿಶ್ಚಲವಾಗಿ ಅಲ್ಲೇ ಇತ್ತು.
ಈ ಪುಟ್ಟ ಚಿಟ್ಟೆಮರಿಗೆ ಸಹಾಯ ಮಾಡೋಣ ಎಂದು ಯುವಕನಿಗೆ ಅನಿಸಿತು.
ಆತ ಮನೆಗೆ ಹೋಗಿ ಕತ್ತರಿ ತಂದ.
ಮೆಲ್ಲಗೆ ಗೂಡಿನ ಬದಿಗಳನ್ನು ಕತ್ತರಿಸಿ, ಆ ಚಿಟ್ಟೆ ಮರಿ ಹೊರಬರಲು ದಾರಿಮಾಡಿಕೊಟ್ಟ.
ನಂತರ ಚಿಟ್ಟೆ ಸುಲಭವಾಗಿ ಹೊರಗೆಬಂತು. ಅದು ಊದಿಕೊಂಡ ದೇಹ ಮತ್ತು ಸಣ್ಣ ಹಾಗೂ ಗಟ್ಟಿಯಾದ ರೆಕ್ಕೆಗಳನ್ನು ಹೊಂದಿತ್ತು.
ಆ ಪುಟ್ಟ ಚಿಟ್ಟೆ ರೆಕ್ಕೆ ಬಿಚ್ಚಿ ಹಾರುವುದನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಆ ಯುವಕ ಅಲ್ಲೇ ಕುಳಿತುಕೊಂಡ.
ಆದರೆ, ಎಷ್ಟು ಹೊತ್ತಾದರೂ ಆ ಘಟನೆ ಜರುಗಲೇ ಇಲ್ಲ.
ಆ ಚಿಟ್ಟೆಗೆ ತನ್ನ ಜೀವನವಿಡೀ ಹಾರಲಾಗಲಿಲ್ಲ. ದೊಡ್ಡ ದೇಹ ಮತ್ತು ಪುಟ್ಟ ರೆಕ್ಕೆಯಿಂದಾಗಿ ಹಾರದೆ ತೆವಳುತ್ತಲೇ ಇರಬೇಕಾಯಿತು.
ಆ ಯುವಕನ ಒಳ್ಳೆಯತನದ ಕುರಿತು ಈಗ ಮಾತನಾಡುವುದು ಬೇಡ. ಯಾಕೆಂದರೆ, ಹುಳವೊಂದು ಚಿಟ್ಟೆಯಾಗಿ ಹೊರಬರಲು ಕಷ್ಟಪಡಬೇಕು ಎಂದು, ಕಷ್ಟಪಟ್ಟು ಹೊರಬರುವುದು ಚಿಟ್ಟೆಯ ರೆಕ್ಕೆ ಬಲಿಷ್ಠಗೊಳ್ಳುವ ಒಂದು ಪ್ರಕ್ರಿಯೆ ಎಂದು ಆತ ತಿಳಿದಿರಲಿಲ್ಲ. ಆ ಚಿಟ್ಟೆಯು ತನ್ನ ಗೂಡಿನ ಸಣ್ಣ ಸಂದಿಯಲ್ಲಿಯೇ ಕಷ್ಟಪಟ್ಟು ಹೊರಗೆ ಬಂದರೆ ಮಾತ್ರ ಅದು ಎಲ್ಲಾ ಚಿಟ್ಟೆಗಳಂತೆ ಹಾರುವ ಚಿಟ್ಟೆಯಾಗುತ್ತಿತ್ತು. ಅದು ಗೂಡಿನೊಳಗಿಂದಲೇ ಹಾರಲು ಸಿದ್ಧವಾಗುವಂತೆ ಹೊರಗೆ ಬರುತ್ತಿತ್ತು.
ಈ ಕತೆಯಿಂದ ಏನು ಕಲಿಯಬಹುದು?
ನಾವು ಜೀವನದಲ್ಲಿ ಪಡುವ ಕಷ್ಟಗಳೇ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಯಾವುದೇ ಕಷ್ಟವಿಲ್ಲದೆ, ನಾವು ಬೆಳೆಯಲು ಮತ್ತು ಇನ್ನಷ್ಟು ಸದೃಢರಾಗಲು ಸಾಧ್ಯವಿಲ್ಲ. ಹೀಗಾಗಿ, ಸದಾ ಸವಾಲುಗಳನ್ನು ಸ್ವೀಕರಿಸಬೇಕು. ಕಷ್ಟಪಟ್ಟು ಮೇಲೆ ಬರಬೇಕು.
Pingback: ಓದಲೇಬೇಕಾದ ನೀತಿಕತೆ: ವಜ್ರ ಮತ್ತು ರೈತ | Karnataka Best Moral Story
Pingback: Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು | ಕರ್ನಾಟಕ Best