ಒಬ್ಬ ಅಂಗಡಿಯವ ತನ್ನ ಅಂಗಡಿಯ ಹೊರಗೆ `ನಾಯಿಮರಿಗಳು ಮಾರಾಟಕ್ಕಿವೆ” ಎಂದು ಬೋರ್ಡ್ ಹಾಕಿದ. ಇಂತಹ ಬೋರ್ಡ್ಗಳು ಮಕ್ಕಳನ್ನು ಸೆಳೆಯುತ್ತವೆ ಎಂದು ಅವನಿಗೆ ಗೊತ್ತಿತ್ತು. ಅದೇರೀತಿ ಆಯಿತು. ಪುಟ್ಟ ಬಾಲಕನೊಬ್ಬ ಅಂಗಡಿಗೆ ಬಂದ.
`ನಾಯಿಮರಿಯನ್ನು ಎಷ್ಟು ರೂಪಾಯಿಗೆ ಮಾರುವಿರಿ?’ ಎಂದು ಆ ಬಾಲಕ ಪ್ರಶ್ನಿಸಿದ.
`2 ಸಾವಿರ ರೂ.ನಿಂದ 5 ಸಾವಿರ ರೂ.’ ಎಂದು ಅಂಗಡಿ ಮಾಲಿಕ ಉತ್ತರಿಸಿದ.
ಆ ಬಾಲಕ ತನ್ನ ಕಿಸೆಗೆ ಕೈ ಹಾಕಿದ. ಅವನಲ್ಲಿ ಇನ್ನೂರು ರೂಪಾಯಿ ಮಾತ್ರವಿತ್ತು.
`ನನ್ನಲ್ಲಿ ಈಗ ಇಷ್ಟೇ ಇದೆ, ನಾನೊಮ್ಮೆ ನಾಯಿ ಮರಿಗಳನ್ನು ನೋಡಬಹುದೇ?” ಎಂದ.
ಅಂಗಡಿ ಮಾಲಿಕ ನಕ್ಕ. ಅನುಮತಿ ನೀಡಿದ. ನಾಯಿಮರಿಗಳಿದ್ದ ಬುಟ್ಟಿಯನ್ನು ಹೆಂಗಸೊಬ್ಬರು ತಂದು ನೆಲದಲ್ಲಿಟ್ಟರು.
ನಾಯಿಮರಿಗಳೆಲ್ಲ ಪುಟಪುಟನೆ ಆಚೆ ಈಚೆ ನೆಗೆಯುತ್ತ ಸಾಗಿದವು.
ಆ ಮುದ್ದಾದ ನಾಯಿಮರಿಗಳಲ್ಲಿ ಒಂದು ನಾಯಿಮರಿ ಮಾತ್ರ ಬುಟ್ಟಿಯಲ್ಲಿಯೇ ಇತ್ತು. ಅದನ್ನು ತೆಗೆದು ಹೊರಗಿಟ್ಟ ಬಾಲಕ.
ಆ ನಾಯಿ ಮರಿಗೆ ಉಳಿದ ನಾಯಿಮರಿಗಳಷ್ಟು ವೇಗವಾಗಿ ಸಾಗಲು ಸಾಧ್ಯವಾಗಲಿಲ್ಲ.
ಅದು ಕುಂಟುತ್ತಾ ಸಾಗುತ್ತಿತ್ತು.
`ಈ ನಾಯಿಮರಿಯ ಕಾಲಿಗೆ ಏನಾಗಿದೆ’ ಎಂದು ಬಾಲಕ ಪ್ರಶ್ನಿಸಿದ.
ಪಶುವೈದ್ಯರು ಈ ನಾಯಿಯನ್ನು ಪರೀಕ್ಷಿಸಿದ್ದಾರೆ. ಅದರ ಎಲುಬಿನಲ್ಲಿ ತೊಂದರೆ ಇದೆ. ಹೀಗಾಗಿ ಇದು ಜೀವನಪೂರ್ತಿ ಕುಂಟುತ್ತಾ ಇರಬೇಕು. ಇದು ಯಾವಾಗಲೂ ಇದಕ್ಕೆ ಊನವಾಗಿ ಉಳಿಯಲಿದೆ ಎಂದು ಅಂಗಡಿಯಾತ ವಿವರಿಸಿದ.
ಬಾಲಕ ಆಶ್ಚರ್ಯಗೊಂಡ ಮತ್ತು ಮುಖದಲ್ಲಿ ಉತ್ಸಾಹ ತೋರಿಸಿದ.
`ನನಗೆ ಈ ನಾಯಿಮರಿ ಬೇಕು, ನಾನು ಇದನ್ನೇ ಖರೀದಿಸುತ್ತೇನೆ’ ಎಂದ.
`ಬೇಡ, ನೀನಿದನ್ನು ಖರೀದಿಸಬೇಕಿಲ್ಲ. ನಿನಗೆ ಬೇಕಿದ್ದರೆ ಈ ಪುಟ್ಟ ನಾಯಿಮರಿಯನ್ನು ಉಚಿತವಾಗಿಯೇ ನೀಡುತ್ತೇನೆ’ ಎಂದು ಅಂಗಡಿಯಾತ ಹೇಳಿದಾಗ, ಹುಡುಗನಿಗೆ ಬೇಸರವಾಯಿತು.
ಅಂಗಡಿಯಾತನ ಕಣ್ಣಲ್ಲಿ ಕಣ್ಣಿಟ್ಟು ದೃಢವಾಗಿ ಹೇಳಿದ;
`ನೀವಿದನ್ನು ಉಚಿತವಾಗಿ ನನಗೆ ನೀಡಬೇಕಿಲ್ಲ. ಈ ನಾಯಿಮರಿಯು ಉಳಿದ ನಾಯಿಮರಿಗಳಂತೆಯೇ ಮೌಲ್ಯಯುತವಾಗಿದೆ ಮತ್ತು ನಾನು ಇದಕ್ಕೆ ಪೂರ್ತಿ ಹಣವನ್ನೇ ನೀಡುತ್ತೇನೆ. ನನ್ನಲ್ಲಿ ಈಗ 200 ರೂಪಾಯಿ ಇದೆ. ಆಮೇಲೆ, ತಂದೆಯೊಟ್ಟಿಗೆ ಬಂದು ಪೂರ್ತಿ ಹಣ ಪಾವತಿಸುತ್ತೇನೆ’ ಎಂದ.
ಅಂಗಡಿಯವನಿಗೆ ಆಶ್ಚರ್ಯವಾಯಿತು.
`ನೀನು ಈ ನಾಯಿಮರಿಯನ್ನು ಹಣ ಕೊಟ್ಟು ಖರೀದಿಸಬೇಕಿಲ್ಲ. ಇದು ನಿನಗೆ ಉಪಯೋಗವಿಲ್ಲ. ಇದಕ್ಕೆ ಎಲ್ಲಾ ನಾಯಿಮರಿಗಳಂತೆ ಓಡಲು ಸಾಧ್ಯವಿಲ್ಲ. ನೆಗೆಯಲು ಸಾಧ್ಯವಿಲ್ಲ’ ಎಂದು ವಿವರಿಸಿದ.
ಆದರೆ, ಅಂಗಡಿಯಾತನಿಗೆ ಆಶ್ಚರ್ಯವಾಗುವಂತೆ ಆ ಬಾಲಕ ತನ್ನ ಪ್ಯಾಂಟ್ ಮೇಲಕ್ಕೆತ್ತಿ ತೋರಿಸಿದ.
ಅಲ್ಲಿ ಅವನ ಕೃತಕ ಕಾಲಿತ್ತು.
ನಂತರ ಆ ಅಂಗಡಿಯ ವ್ಯಕ್ತಿಯನ್ನು ನೋಡಿ ಹೇಳಿದ
`ಹೌದು, ನನಗೂ ಎಲ್ಲರಂತೆ ಓಡಲು ಸಾಧ್ಯವಾಗುವುದಿಲ್ಲ ಮತ್ತು ಈ ಪುಟ್ಟ ನಾಯಿಮರಿಗೂ ತನ್ನ ಭಾವನೆಯನ್ನು ಅರ್ಥಮಾಡಿಕೊಳ್ಳುವ ನನ್ನಂತಹ ವ್ಯಕ್ತಿಯ ಅವಶ್ಯಕತೆ ಇದೆ’ ಎಂದ.
ಈ ಕತೆಯು ಬಾಲಕನ ಮನಸ್ಸಿನ ಒಳ್ಳೆಯತನವನ್ನು ಸೂಚಿಸುತ್ತದೆ. ಆದರೆ, ನಮ್ಮ ನಿಮ್ಮ ನಡುವೆ ಸಾಕಷ್ಟು ದಿವ್ಯಾಂಗರು ಇದ್ದಾರೆ. ಅವರ ಕಡೆಗೂ ನಮ್ಮ ದೃಷ್ಟಿ ಸಕಾರಾತ್ಮಕವಾಗಿರಬೇಕು. ಅವರಿಗೆ ಸಾಧನೆಗೆ ಸದಾ ಪ್ರೋತ್ಸಾಹ ನೀಡಬೇಕು
(ಮೂಲ: ಇಂಗ್ಲಿಷ್, ಕನ್ನಡ ಅನುವಾದ: ಕರ್ನಾಟಕ ಬೆಸ್ಟ್.ಕಾಂ).
Pingback: Moral Story: ವಜ್ರ ಮತ್ತು ರೈತ | Karnataka Best Moral Story
Pingback: Inspiration: ಸ್ಫೂರ್ತಿದಾಯಕ ಬದುಕಿಗೆ ಹತ್ತು ನೀತಿಕತೆಗಳು | ಕರ್ನಾಟಕ Best