ಕೊಡಗು : ದೇಗುಲದಲ್ಲಿ ಕೊರಗಜ್ಜ ದೇವರಿಗೆ ಇಟ್ಟಿದ್ದ ಪ್ರಸಾದವನ್ನು ಕದ್ದ ಕಳ್ಳನ ಸ್ಥಿತಿ ಏನಾಗಿದೆ ಗೊತ್ತಾ? ಕಳ್ಳನಿಗೆ ಕೊರಗಜ್ಜ ಶಿಕ್ಷೆ ಕೊಟ್ಟದ್ದು, ದೇಗುಲಕ್ಕೆ ಬಂದು ಕ್ಷಮಾಪಣೆ ಕೇಳಿದ್ದಾನೆ. ಇದು ಮಡಿಕೇರಿ ತಾಲೂಕಿನ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ಸಖತ್ ಸದ್ದು ಮಾಡುತ್ತಿರುವ ಸುದ್ದಿ.
ದೇವಸ್ಥಾನದಲ್ಲಿ ಕೊರಗಜ್ಜ ದೇವರಿಗೆ ಪ್ರಸಾದವಾಗಿ ಇಟ್ಟಿದ್ದ ಮದ್ಯದ ಪ್ಯಾಕೆಟ್ ನ್ನು ಸ್ಥಳೀಯ ವ್ಯಕ್ತಿಯೊಬ್ಬ ವಾರದ ಹಿಂದೆ ಕದ್ದಿದ್ದ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ರೀತಿ ಹಲವು ಬಾರಿ ದೇವಾಲಯದಲ್ಲಿ ಮದ್ಯ ಎಗರಿಸಿದ್ದ. ಇದರಿಂದ ಬೇಸತ್ತ ಅರ್ಚಕ ಉಮೇಶ್, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಕೊರಗಜ್ಜನಿಗೆ ಹರಕೆ ಇಟ್ಟಿದ್ದರು.
ಹರಕೆ ಕಟ್ಟಿದ ಎರಡೇ ದಿನದಲ್ಲಿ ಮದ್ಯ ಕದ್ದಾತನ ಕಣ್ಣಿಗೆ ಹಾನಿಯಾಗಿದ್ದು, ಕಣ್ಣು ಕಪ್ಪಾಗಿ ಊತ ಬಂದು ಸಂಪೂರ್ಣ ಮುಚ್ಚಿ ಹೋಗಿದೆ. ಕೂಡಲೇ ಕೊರಗಜ್ಜನ ಬಳಿ ಓಡೋಡಿ ಬಂದ ಆ ವ್ಯಕ್ತಿ ಕೊರಗಜ್ಜನಿಗೆ ಹರಕೆ ನೀಡಿ ಕ್ಷಮಾಪಣೆ ಕೇಳಿದ್ದಾನೆ. ಕ್ಷಮಾಪಣೆ ಬಳಿಕ ಆ ವ್ಯಕ್ತಿ ಸುಧಾರಿಸಿಕೊಳ್ಳುತ್ತಿದ್ದಾನಂತೆ. ಈ ಸುದ್ದಿ ಕೊಡಗಿನ ತುಂಬ ಮನೆಮಾತಾಗಿದೆ.