ಶಿವ್ ಖೇರಾ ಬರೆದ “ಯು ಕ್ಯಾನ್ ವಿನ್’ ಪುಸ್ತಕದಲ್ಲಿ ಓದಿದ ಕತೆಯಿದು. ಈ ಕತೆಯನ್ನು ಈ ಹಿಂದೆ ಬೇರೆಲ್ಲೋ ಓದಿದ್ದೆ. ಯಾವ ಕ್ಲಾಸ್ ಪಠ್ಯ ಪುಸ್ತಕದಲ್ಲಿ ಎನ್ನುವುದು ನೆನಪಿಲ್ಲ. ಈ ಪುಟ್ಟ ಕತೆಯು ದೊಡ್ಡದಾದ ವ್ಯಕ್ತಿತ್ವ ವಿಕಸನ ಪಾಠ ಹೊಂದಿದೆ. ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.
ಡೇವಿಡ್ ಮತ್ತು ಗೋಲಿಯಾಥ್
ಒಂದು ಊರಿನಲ್ಲಿ ದೈತ್ಯನಿದ್ದ. ದೈತ್ಯನೆಂದರೆ ತುಂಬಾ ಬೃಹತ್ ಗಾತ್ರದ ಶಕ್ತಿಶಾಲಿ ವ್ಯಕ್ತಿ. ಆತ ಎಲ್ಲರಿಗೂ ಕಿರುಕುಳ ಕೊಡುತ್ತಿದ್ದ. ಆ ಊರಿನವರು ಆತ ಕೊಡುವ ಹಿಂಸೆಯಿಂದ ತತ್ತರಿಸಿದ್ದರು. ಆತನಿಗೆ ಭಯಪಟ್ಟು ಬದುಕುತ್ತಿದ್ದರು.

ಒಂದು ದಿನ ಆ ಹಳ್ಳಿಯಲ್ಲಿರುವ ಸಹೋದರರನ್ನು ಭೇಟಿಯಾಗಲು ಡೇವಿಡ್ ಎಂಬ 16 ವರ್ಷದ ಯುವಕ ಬಂದ. ಎಲ್ಲರೂ ಗೋಲಿಯಾಥ್ ಎಂಬ ದೈತ್ಯನಿಗೆ ಭಯಪಡುತ್ತಿರುವುದನ್ನು ನೋಡಿದ. “ನೀವು ಯಾಕೆ ಈ ಡುಮ್ಮನಿಗೆ ಭಯಪಡುತ್ತಿದ್ದೀರಿ? ನೀವೆಲ್ಲ ಯಾಕೆ ಇವನ ವಿರುದ್ಧ ನಿಂತು ಹೋರಾಡಬಾರದು?’ ಎಂದು ಪ್ರಶ್ನಿಸಿದ.
ಹಳ್ಳಿಯ ಜನರು ಗಾಬರಿಯಿಂದ, “ಈ ದೈತ್ಯನ ವಿರುದ್ಧ ಹೋರಾಡುವುದೇ? ಆತ ಹೊಡೆತಕ್ಕೆ ಸಿಲುಕದಷ್ಟು ಎತ್ತರವಾಗಿದ್ದಾನೆ. ನಾವೆಲ್ಲ ಆತನ ಮುಂದೆ ತುಂಬಾ ಕುಬ್ಜರು’’ ಎಂದರು.

ಅದಕ್ಕೆ ಡೇವಿಡ್, “ಇಲ್ಲ, ಆತ ಹೊಡೆಯಲಾಗದಷ್ಟು ಎತ್ತರದಲ್ಲಿಲ್ಲ. ಹೊಡೆತದಿಂದ ತಪ್ಪಿಸಿಕೊಳ್ಳಲಾಗದಷ್ಟು ಎತ್ತರವಾಗಿದ್ದಾನೆ’’ ಎಂದ (ನೋಟ್ಸ್: ಈತ ಸಮಸ್ಯೆಯನ್ನು ನೋಡಿದ ರೀತಿಯನ್ನು ಗಮನಿಸಿ)
ಮುಂದಿನದು ಇತಿಹಾಸ. ಆ ದೈತ್ಯನನ್ನು ಡೇವಿಡ್ ಕವಣೆಯಿಂದ ಹೊಡೆದು ಸಾಯಿಸಿದ. ಎಲ್ಲರೂ ಆ ದೈತ್ಯನನ್ನು ಹೊಡೆಯಲಾಗದಷ್ಟು ಎತ್ತರದಲ್ಲಿದ್ದಾನೆ ಎಂದು ಭಾವಿಸಿದ್ದರು. ಆದರೆ, ಡೇವಿಡ್ ನೋಡಿದ ದೃಷ್ಟಿಕೋನ ಬೇರೆ.
ಇದೇ ರೀತಿ ನಮ್ಮ ಬದುಕಿನಲ್ಲಿಯೂ ಏನಾದರೂ ಸಮಸ್ಯೆ, ಸವಾಲುಗಳು ಬಂದರೆ ಭಿನ್ನವಾಗಿ ಯೋಚಿಸೋಣ. ಸಮಸ್ಯೆಗಳಿಗೆ ಭಯ ಪಡುವುದು ಬೇಡ.
ಎಲ್ಲಾ ನೀತಿಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


















Got a Questions?
Find us on Socials or Contact Us and we’ll get back to you as soon as possible.